ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಹೊಲಿಗೆ ಯಂತ್ರಗಳ ವಿತರ

ಮಾಗಡಿ : ಪಟ್ಟಣದ ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಗ್ರಾಮೋದ್ಯೋಗ ಹಾಗೂ ಸಣ್ಣ ಕೈಗಾರಿಕೆಗಳ ಇಲಾಖೆಯ ಸಹಯೋಗದೊಂದಿಗೆ ತರಬೇತಿ ಹೊಂದಿದ ಫಲಾನುಭವಿಗಳಿಗೆ ಸ್ವಯಂ ಚಾಲಿತ ಹೊಲಿಗೆ ಯಂತ್ರ ಸಾಮಾಗ್ರಿಗಳನ್ನು ವಿತರಣೆ ಮಾಡಲಾಯಿತು. ಸಾಮಾಗ್ರಿ ವಿತರಿಸಿದ ರಾಮನಗರ ಜಿಲ್ಲಾ ಪಂಚಾಯತಿಯ ಮಾಜಿ ಅಧ್ಯಕ್ಷ ಎಂ ಕೆ ಧನಂಜಯ ಮಾತನಾಡಿ, ಫಲಾನುಭವಿಗಳನ್ನು ಆಯ್ಕೆಮಾಡಿ ಅವರಿಗೆ ತರಬೇತಿ ನೀಡಿ ನಂತರ ವಿತರಿಸುತ್ತಿರುವ ಹೊಲಿಗೆ ಯಂತ್ರಗಳು ಗುಣಮಟ್ಟದಿಂದ ಕೂಡಿವೆ. ನಿರುದ್ಯೋಗ ಯುವತಿಯರು ಇವುಗಳನ್ನು ಉಪಯೋಗಿಸಿಕೊಂಡು ಸ್ವಾವಲಂಬಿಗಳಾಗಿ ಬಾಳ್ವೆಯನ್ನು ನಡೆಸಿ ಎಂದು ಪ್ರೇರೇಪಿಸಿದರು. ಫಲಾನುಭವಿಗಳು ಈ ಸವಲತ್ತುಗಳನ್ನು ಪಡೆದುಕೊಂಡು ಅರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದಾರೆಯೇ ಎಂಬ ಬಗ್ಗೆ ಸಮೀಕ್ಷೆ ಮಾಡುವುದಕ್ಕೆ ಇಲಾಖೆಯ ಅಧಿಕಾರಿಗಳು ಕ್ರಮವಹಿಸಬೇಕು. ಸಲವತ್ತುಗಳನ್ನು ಸದುದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡರೆ ಇನ್ನೂ ಹೆಚ್ಚಾಗಿ ಸವಲತ್ತು ವಿತರಿಸಲು ಅನೂಕೂಲವಾಗಲಿದೆ ಎಂದು ತಿಳಿಸಿದರು. ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಸರ್ಕಾರ ಹಲವು ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿದೆ. ಇಂದು ಹಲವು ಯುವಕ ಯುವತಿಯರು ಕರಕುಶಲ ಹಾಗೂ ಇನ್ನಿತರ ಕೌಶಲ ಹೊಂದಿದ್ದು ಅಂತಹವರು ಸ್ವಉದ್ಯೋಗದ ಮೂಲಕ ಜೀವನ ರೂಪಿಸಿಕೊಳ್ಳಲು ಸರ್ಕಾರ ನೀಡುವ ಇಂತಹ ಉಪಕರಣಗಳು ಅತಿ ಉಪಯುಕ್ತವಾಗಿವೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಡಾಕ್ಟರ್ ಡಿ.ಸಿ. ರಾಮಚಂದ್ರ ರವರು ಫಲಾನುಭವಿಗಳು ವಿತರಿಸಲಾಗಿರುವ ಇಂತಹ ಉಪಕರಣಗಳ ಸದ್ಬಳಕೆಯಿಂದ ಜೀವನ ರೂಪಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು. ಗ್ರಾಮೀಣ ಭಾಗದ ಮಹಿಳೆಯರು ತಮ್ಮ ಜೀವನ ನಿರ್ವಹಣೆಗೆ ನಾನಾ ತರಬೇತಿಗಳನ್ನು ಪಡೆಯುವ ಅಗತ್ಯವಿದೆ. ಶಿಕ್ಷಣ ಪಡೆದು ಉದ್ಯೋಗ ದೊರಕದೇ ನಿರಾಶರಾಗುವುದಕ್ಕಿಂತ ಹೊಲಿಗೆ ಯಂತ್ರ ತರಬೇತಿ ಪಡೆದು ಉತ್ತಮ ಬದುಕನ್ನು ಕಂಡುಕೊಳ್ಳಬೇಕು. ಮಹಿಳೆಯರು ಅಬಲೆಯರಲ್ಲ, ಸಬಲೆಯರು ಎನ್ನುವುದನ್ನು ತೋರಿಸಿ ಕೊಡಬೇಕು ಎಂದರು. ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ತಿ. ನಾ. ಪದ್ಮನಾಭ, ದರ್ಶನ್ ಡಿಸ್ಟ್ರಿಬ್ಯೂಟರ್ಸ್ ನ ಡಿ.ಕೆ. ಚಂದ್ರಣ್ಣ, ತಾಲೂಕು ಸ್ಕೌಟ್ ಕಾರ್ಯದರ್ಶಿ ಎನ್. ಮುನಿಯಪ್ಪ ಮೊದಲಾದವರು ಉಪಸ್ಥಿತರಿದ್ದರು.